ಎಸ್.ವಿ.ಕೆ ಫಿಲಂ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಶಿವಗಾಮಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಸುಸೂತ್ರವಾಗಿ ಮುಕ್ತಾಯಗೊಂಡಿದೆ. ಜಿ.ಶ್ರೀಧರ್ ನಿರ್ಮಾಣ ಹಾಗೂ ಮಧು ಮಿಣಕನಗುರ್ಕಿ ನಿರ್ದೇಶನವಿರುವ ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ರಮ್ಯಾ ಕೃಷ್ಣ ಕೂಡಾ ನಟಿಸಿರುವುದು ವಿಶೇಷ.
ಕಳೆದ ಹದಿನೈದು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಕಾರ್ಯ ನಿರ್ವಹಿಸಿರುವ ಮಧು ಮಿಣಕನಕುರ್ಕಿ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಪಿ.ಎನ್ ಸತ್ಯ, ಎಸ್.ಎಸ್ ಡೇವಿಡ್, ಎನ್.ಟಿ ಜಯರಾಂರೆಡ್ಡಿ ಹಾಗೂ ತೆಲುಗಿನ ಖ್ಯಾತ ನಿರ್ದೇಶಕರುಗಳ ಬಳಿ ಕೆಲಸ ಮಾಡಿದ ಅನುಭವ ಹೊಂದಿರುವ ಮಧು ಕಥೆ ಚಿತ್ರಕಥೆ ಸಂಭಾಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ‘ಶಿವಗಾಮಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ರಮ್ಯಾ ಕೃಷ್ಣ ಅಭಿನಯದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಶಿವಗಾಮಿಯ ಮೊದಲ ಹಂತದ ಚಿತ್ರೀಕರಣ ಸಮಾಪ್ತಿಗೊಂಡಿದೆ. ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ಮಿಂಚಿದ್ದ ರಮ್ಯಾ ಕೃಷ್ಣ ಅಭಿನಯಿಸಿರುವ ದೃಶ್ಯಗಳು ಈ ಚಿತ್ರದ ಹೈಲೈಟ್ಗಳಲ್ಲೊಂದಾಗಲಿದೆ.
ಬಾಲ್ರೆಡ್ಡಿ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ವಿ ನಾಗೇಂದ್ರಪ್ರಸಾದ್ ಹಾಗೂ ರಾಂನಾರಾಯಣ್ ಸಾಹಿತ್ಯ, ಮಗಧೀರ, ಅರುಂಧತಿ ಖ್ಯಾತಿಯ ಡಾ.ಶಿವಶಂಕರ್ ಮಾಸ್ಟರ್ ನೃತ್ಯ ನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನವಿರುವ ಈ ಚಿತ್ರಕ್ಕೆ ಕೆ.ವೇಮರೆಡ್ಡಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಜಿ.ಶ್ರೀಧರ್ ಮೊದಲ ಬಾರಿ ಕನ್ನಡದಲ್ಲಿ ನಿರ್ಮಾಪಕರಾಗಿರುವ ‘ಶಿವಗಾಮಿಗೆ ಅದ್ದೂರಿ ತಾರಾಬಳಗವೂ ಇದೆ. ‘ಸಿಂಪಲ್ ಆಗ್ ಇನ್ನೊಂದ್ ಲವ್ಸ್ಟೋರಿ ಖ್ಯಾತಿಯ ಪ್ರವೀಣ್, ರಿತೇಶ್, ಕುರಿಬಾಂಡ್ ರಂಗ, ಪ್ರಶಾಂತ್, ಆಶೀಶ್ ವಿದ್ಯಾರ್ಥಿ, ರವಿಕಾಳೆ, ಅವಿನಾಶ್, ಪವಿತ್ರಾ ಲೋಕೇಶ್, ರೋರರ್ ರಘು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.